ಯೋಧ ಹನುಮಂತಪ್ಪ ದೆಹಲಿ ಆಸ್ಪತ್ರೆಗೆ ದಾಖಲು
ಸಿಯಾಚಿನ್ ಹಿಮಕುಸಿತದಿಂದ ಪವಾಡಸದೃಶ್ಯ ರೀತಿಯಲ್ಲಿ ಪಾರಾದ ರಾಜ್ಯದ ಯೋಧ ಲ್ಯಾನ್ಸ್ ನಾಯಕ್ ಕೊಪ್ಪದ ಅವರನ್ನು ಮಂಗಳವಾರ ಬೆಳಿಗ್ಗೆ ಇಲ್ಲಿನ ಸೇನಾ ನೆಲೆಯಿಂದ ವಿಶೇಷ ವಿಮಾನ ಅಂಬುಲೆನ್ಸ್ ಮೂಲಕ ದೆಹಲಿಯ ಆರ್ಆರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಹನುಮಂತಪ್ಪ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಬೆಟದೂರಿನವರು. ಫೆಬ್ರುವರಿ 3ರಂದು ಸಿಯಾಚಿನ್ ನೀರ್ಗಲ್ಲುಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಅವರು ಹಿಮರಾಶಿಯ 25 ಅಡಿ ಆಳದಲ್ಲಿ ಸಿಲುಕಿದ್ದರು. ಆರು ದಿನಗಳಿಂದ ಹಿಮರಾಶಿಯ ಅಡಿಯಲ್ಲಿದ್ದ ಸಿಲುಕಿದ್ದ ಅವರು ಸೋಮವಾರ ಸೇನೆ ಕಾರ್ಯಾಚರಣೆ ನಡೆಸುವಾಗ ಪವಾಡ ಸದೃಶ್ಯ ರೀತಿಯಲ್ಲಿ ಪತ್ತೆಯಾಗಿದ್ದರು.
ಹನುಮಂತಪ್ಪ ಅವರನ್ನು ಸಿಯಾಚಿನ್ ಸೇನಾ ಶಿಬಿರದಿಂದ ದೆಹಲಿ ರೀಸರ್ಚ್ ಅಂಡ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಹಿಮಕುಸಿತ ಘಟನೆಯಲ್ಲಿ ಒಬ್ಬರು ಜೆಸಿಒ ಅಧಿಕಾರಿ ಸೇರಿದಂತೆ ಒಟ್ಟು ಹತ್ತು ಯೋಧರು ಹಿಮದಡಿ ಸಿಲುಕಿದ್ದರು. ಇವರಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ. 5 ಮೃತದೇಹಗಳನ್ನು ಹೊರತೆಗೆಯಲಾಗಿದೆ .ಇನ್ನು ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆಯ ಈಶಾನ್ಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ತಿಳಿಸಿದ್ದಾರೆ.