ಗೋವಾದಲ್ಲಿ ಭಾವೋದ್ವೇಗಕ್ಕೆ ಒಳಗಾದ ಪ್ರಧಾನಿ ಮೋದಿ
ಪಣಜಿ (ಗೋವಾ): ಗೋವಾದ ಮೋಪಾ ಪೀಠಭೂಮಿಯಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಭಾವೋದ್ವೇಗಕ್ಕೆ ಒಳಗಾದ ಘಟನೆ ಭಾನುವಾರ ಘಟಿಸಿತು.
ಭಾರತದಲ್ಲಿ ಯಾವುದೇ ಹಣ ಲೂಟಿಯಾದರೆ ಮತ್ತು ಭಾರತದ ತೀರದಿಂದ ಆಚೆಗೆ ಹೋದರೆ, ಅದನ್ನು ಪತ್ತೆ ಹಚ್ಚುವುದು ನಮ್ಮ ಕರ್ತವ್ಯ. ಹಲವಾರು ಸಂಸತ್ ಸದಸ್ಯರು ನನ್ನ ಬಳಿ ಚಿನ್ನಾಭರಣ ಖರೀದಿಗೆ ಪಾನ್ (ಪಿಎ ಎನ್) ಕಡ್ಡಾಯ ಮಾಡಬೇಡಿ ಎಂದು ನನ್ನನ್ನು ಆಗ್ರಹಿಸಿದ್ದರು ಎಂಬುದನ್ನು ತಿಳಿದರೆ ನಿಮಗೆ ಆಘಾತವಾಗಬಹುದು ಎಂದು ಪ್ರಧಾನಿ ಹೇಳಿದರು.
ಮುಂದುವರೆದ ಅವರು ‘‘ನಾನು ಉನ್ನತ ಕಚೇರಿಯ ಕುರ್ಚಿಯಲ್ಲಿ ಕೂರಲೆಂದು ಹುಟ್ಟಿದವನಲ್ಲ. ನನ್ನ ಎಲ್ಲವನ್ನೂ, ನನ್ನ ಕುಟುಂಬವನ್ನು, ನನ್ನ ಮನೆಯನ್ನು ನಾನು ದೇಶಕ್ಕಾಗಿ ತ್ಯಜಿಸಿದ್ದೇನೆ’ (ದೇಶ್ ಕೆ ಲಿಯೆ ಘರ್ ಪರಿವಾರ್ ಛೋಡಾ ಹೈ, ಸಬ್ ಕುಚ್ ದೇಶ್ ಕೆ ನಾಮ್ ಕರಾ ಹೈ) ಎಂದು ಹೇಳುತ್ತಾ ಪ್ರಧಾನಿ ಭಾವೋದ್ಯೋಗಕ್ಕೆ ಒಳಗಾದರು. ಅವರ ಕಣ್ಣಂಚಿನಲ್ಲಿ ನೀರು ತುಂಬಿತು. ತಮ್ಮ ನಿರರ್ಗಳ ಭಾಷಣವನ್ನು ಕೆಲ ನಿಮಿಷ ನಿಲ್ಲಿಸಿ ನೀರು ಕುಡಿದರು.
ಆಮೇಲೆ ಮಾತು ಮುಂದುವರೆಸಿದ ಅವರು ‘ನಮ್ಮ ಯುವಕರ ಭವಿಷ್ಯವನ್ನು ನಾವು ಏಕೆ ಅಪಾಯಕ್ಕೆ ತಳ್ಳಬೇಕು?’ ಎಂದು ಪ್ರಶ್ನಿಸಿ ರಾಜಕೀಯ ಮಾಡಬಯಸುವವರು ಹಾಗೆ ಮಾಡಲು ಮುಕ್ತರಾಗಿದ್ದಾರೆ’ ಎಂದು ನುಡಿದರು.
ವಿಡಿಯೋ ಕೃಪೆ: ಎಎನ್ಐ
ಸುದ್ದಿ ಕೃಪೆ ವಿಜಯವಾಣಿ